ಐಟಿಸಿಟಿ ಬೆಂಗಳೂರಲ್ಲಿ ಪಬ್ ಸಂಸ್ಕೃತಿ ಈಗಂತೂ ವಿಕೃತಿಯಾಗಿದೆ. ಪಬ್ ಗಳೇ ಯುವಕ, ಯುವತಿಯರಿಗೆ ಸೆಲಬ್ರೇಶನ್ ಸ್ಪಾಟ್ ಗಳಾಗಿವೆ. ಅಂಥಾ ಪಬ್ನಲ್ಲಿ ನಡೆಯುವ ಪ್ರೇಮಕಥೆಯೇ ಶುಗರ್ ಫ್ಯಾಕ್ಟರಿ. ನಿರ್ದೇಶಕ ದೀಪಕ್ ಅರಸು ಯುವ ಪೀಳಿಗೆಯ ಮನದ ತಳಮಳ, ತುಮುಲಗಳನ್ನು ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ತೆರೆಮೇಲೆ ತರಲು ಪ್ರಯತ್ನಿಸಿದ್ದಾರೆ, ಯೂ ಟ್ಯೂಬ್ ಚಾನೆಲಿಗೆ ಇಂಟರೆಸ್ಟಿಂಗ್ ಸ್ಟೋರಿ ಹುಡುಕುತ್ತ ನಿರೂಪಕಿ(ರುಹಾನಿ ಶೆಟ್ಟಿ) ಪಬ್ವೊಂದಕ್ಕೆ ಬರುತ್ತಾಳೆ. ಅಲ್ಲಿ ಆಕೆಗೆ ಸಿಗುವ ಯುವಕನೇ ಆರ್ಯ (ಡಾರ್ಲಿಂಗ್ ಕೃಷ್ಣ). ಆತನೊಬ್ಬ ವೆಡ್ಡಿಂಗ್ ಪ್ಲಾನರ್, ಜೀವನದಲ್ಲಿ ನಮ್ಮನ್ನ ನಾವು ಪ್ರೀತಿಸಬೇಕು. ಪ್ರೀತಿ, ಪ್ರೇಮ ಅಂತ ಹೆಣ್ಣಿನ ಹಿಂದೆ ಹೋದವರು ಉದ್ದಾರವಾಗಲ್ಲ ಎನ್ನುವ ಮನಸ್ಥಿತಿ ಆತನದು. ಅದೇ ರೀತಿ ನನ್ನದೂ ಸೇಮ್ ಪಾಲಿಸಿ ಎನ್ನುವ ನಾಯಕಿ ಅದಿತಿ ಬೋಪಣ್ಣಗೆ (ಸೋನಲ್ ಮಾಂಟೆರಿಯೋ) ಈ ಮದುವೆ, ಸಂಸಾರ ಎಂದರೆ ಅಲರ್ಜಿ. ಪೋಷಕರಿಂದ ದೂರಾಗಿ ಒಂಟಿಜೀವನ ನಡೆಸುತ್ತಿದ್ದ ಆಕೆ ತನ್ನ ನೋವು ಮರೆಯಲು ಕುಡಿತದ ಹವ್ಯಾಸ ಬೆಳೆಸಿಕೊಂಡಿರುತ್ತಾಳೆ. ಇವರಿಬ್ಬರಿಗೂ ಈ ಪಬ್ನಲ್ಲೇ ಪರಿಚಯವಾಗಿ, ಗೆಳೆತನ ಬೆಳೆದು, ಒಡನಾಟದ ಜೊತೆಗೆ ಸ್ನೇಹ ಪ್ರೀತಿಯ ಕಡೆ ವಾಲುವಂತೆ ಮಾಡುತ್ತದೆ. ಎಲ್ಲವೂ ಸರಿ ಎನ್ನುವಷ್ಟರಲ್ಲಿ ನಮ್ಮದು ಫೇಕ್ ಲವ್ ಎನ್ನುತ್ತಾ ಇಬ್ಬರೂ ಬೇರೆಯಾಗುತ್ತಾರೆ.
ನಂತರ ನಡೆಯುವ ಕಥೆಯಲ್ಲಿ ಮೈಸೂರಿಗೆ ಬರುವ ಆರ್ಯ ವೆಡ್ಡಿಂಗ್ ಆರ್ಗನೈಸರ್ ಕೆಲಸದಲ್ಲೇ ಮುಂದುವರಿಯುತ್ತಾನೆ. ಒಮ್ಮೆ ಆರ್ಯನ ಕಾರು, ಸ್ಕೂಟಿಯೊಂದಕ್ಕೆ ಡಿಕ್ಕಿಹೊಡೆದಾಗ ಪರಿಚಯವಾಗುವ ನಂದಿನಿ(ಅದ್ವಿತಿಶೆಟ್ಟಿ) ಆರ್ಯನ ಸಂಸ್ಥೆಯಲ್ಲೇ ಕೆಲಸಕ್ಕೆ ಸೇರಿಕೊಳ್ಳುತ್ತಾಳೆ, ಇದೇ ಸಂದರ್ಭದಲ್ಲಿ ಬಾಲ್ಯದ ಗೆಳೆಯನ ಮದುವೆ ಕಾರ್ಯಕ್ರಮವನ್ನು ಆರ್ಗನೈಜ್ ಮಾಡುವ ಜವಾಬ್ದಾರಿ ಹೊತ್ತ ಆರ್ಯನ ಬದುಕಿನಲ್ಲಿ ಅಲ್ಲಿಂದ ಮತ್ತೊಂದು ಟ್ವಿಸ್ಟ್ ಎದುರಾಗುತ್ತದೆ, ಚಿತ್ರಕಥೆಗೆ ಅಲ್ಲೊಂದು ತಿರುವು ಪಡೆಯೋ ಮೂಲಕ ಕಥೆ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಲ್ಲುತ್ತದೆ. ಹಾಗಾದರೆ ಆ ಟ್ವಿಸ್ಟ್ ಏನು, ಆರ್ಯ ಕೊನೆಗೆ ಯಾರನ್ನ ಮದುವೆಯಾಗ್ತಾನೆ.. ಈ ಎಲ್ಲ ವಿಚಾರ ತಿಳಿಯಬೇಕಾದರೆ ಶುಗರ್ ಫ್ಯಾಕ್ಟರಿಯೊಳಗೆ ನೀವೊಮ್ಮೆ ಹೋಗಿ ಬರಲೇಬೇಕು.
ಛಾಯಾಗ್ರಹಕ ಸಂತೋಷ್ ರೈ ಪಾತಾಜೆ ಗೋವಾ, ಕಝುಕಿಸ್ಥಾನದ ಸುಂದರ ತಾಣಗಳನ್ನು ಚಿತ್ರದಲ್ಲಿ ತುಂಬಾ ಕಲರ್ ಫುಲ್ ಆಗಿ ತೋರಿಸಿದ್ದಾರೆ ಹಾಗೆಯೇ ಕಬೀರ್ ರಫಿ ಅವರ ಸಂಗೀತದ ಹಾಡುಗಳು ಗಮನ ಸೆಳೆಯುತ್ತದೆ. ನಾಯಕ ಡಾರ್ಲಿಂಗ್ ಕೃಷ್ಣ ತಮ್ಮ ಪಾತ್ರವನ್ನು ಲೀಲಾಜಾಲವಾಗಿ ನಿಭಾಯಿಸಿ ವೀಕ್ಷಕರ ಗಮನ ಸೆಳೆದಿದ್ದಾರೆ. ನಾಯಕಿಯರಾಗಿ ಸೋನಾಲ್ ಮಾಂಟೆರಿಯೋ, ಅದ್ವಿತಿ ಶೆಟ್ಟಿ ಕೂಡ ತಂತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ.